“ರಾಮನೆಂಬವನು ಓರ್ವನಿರ್ದ” “ಹುಂ” “ಸೀತೆಯವನ ಸತಿ” “ಹುಂ”
“ಪಿತನ ಅಣತಿಯೊಲು ಕಾಡಲಲೆಯೆ ರಾವಣನು ಅವಳನೊಯ್ದಂ”|
ನಿದ್ರೆಗಾಗಿ ತಾಯ್ ಕಥೆಯ ಪೇಳೆ ಹುಂಕಾರದೊಡನೆ ಕೇಳೆ
“ಬಿಲ್ಲು ಲಕ್ಷ್ಮಣಾ ಬಿಲ್ಲುಬಿಲ್ಲೆಲ್ಲಿ?” ಎನುವರೆನಿದ್ದೆಮಾತು ಪೊರೆಗೆ||
(ಛಂದಸ್ಸು: ಸಂತುಲಿತ ಮಧ್ಯಾವರ್ತ ಗತಿ)
- ಮೂಲ: ಲೀಲಾಶುಕ
ಅನುವಾದ: ಉಮಾಶಂಕರ ಕೇಳತ್ತಾಯ
ತಾತ್ಪರ್ಯ: ಬಾಲಕೃಷ್ಣನನ್ನು ಮಲಗಿಸಲು ಯಶೋದೆ ಕಥೆ ಹೇಳುತ್ತಿರುತ್ತಾಳೆ. ಅಂದು ರಾಮಾಯಣದ ಕಥೆಯನ್ನು ಹೇಳುತ್ತಾಳೆ.
ಯಶೋದೆ: "ರಾಮ ಎಂಬವನೊಬ್ಬನಿದ್ದ."
ಕೃಷ್ಣ: "ಹುಂ."
ಯಶೋದೆ: "ಸೀತೆ ಅವನ ಮಡದಿ."
ಕೃಷ್ಣ: "ಹುಂ."
ಹೀಗೇ ಸೀತಾಪಹರಣದ ತನಕ ಕಥೆ ಮುಂದುವರೆಯುತ್ತದೆ. ಅಲ್ಲಿಯವರೆಗೂ ಕೃಷ್ಣನು ಅರೆನಿದ್ದೆಯಲ್ಲೇ 'ಹುಂ', 'ಹುಂ' ಎಂದು ಹೇಳುತ್ತಿದ್ದ. ಯಾವಾಗ ರಾವಣ ಸೀತೆಯನ್ನು ಕದ್ದೊಯ್ದ ಎಂದು ಯಶೋದೆ ಹೇಳಿದಳೋ, ಕೂಡಲೇ ಕೃಷ್ಣ ವ್ಯಗ್ರಗೊಂಡನಂತೆ. ಆಗ ಹೇಳಿದ 'ಲಕ್ಷ್ಮಣ, ನನ್ನ ಧನುಸ್ಸೆಲ್ಲಿ, ಧನುಸ್ಸೆಲ್ಲಿ, ಧನುಸ್ಸೆಲ್ಲಿ' ಎಂಬ ಕೃಷ್ಣನ ಮಾತುಗಳು ನಮ್ಮನ್ನು ರಕ್ಷಿಸಲಿ.
ಮೂಲಶ್ಲೋಕ:
ರಾಮೋನಾಮ ಬಭೂವ ಹುಂ ತದನುಗಾ ಸೀತೇತಿ ಹುಂ
ತೌ ಪಿತುರ್ನಿರ್ದೇಶಾತ್ ವಿಪಿನಾಶ್ರಯೇ ವಿಚರತಸ್ತಾಮಾಹರದ್ರಾವಣ:|
ನಿದ್ರಾರ್ಥಂ ಜನನೀಕಥಾಮಿತಿತದಾ ಹುಂಕಾರತ: ಶ್ರುಣ್ವತ:
ಸೌಮಿತ್ರೇ ಕ್ವ ಧನುರ್ಧನುರ್ಧನುರಿತಿ ವ್ಯಗ್ರಾಗಿರ: ಪಾಂತುವ:||