Tuesday, April 23, 2024

ವಿಶ್ವ ಪುಸ್ತಕದಿನ

 


ಇವತ್ತು ವಿಶ್ವ ಪುಸ್ತಕ ದಿನವಂತೆ. ನನಗೆ ಪುಸ್ತಕಗಳನ್ನೋದುವ ಹುಚ್ಚು ಬೆಳೆದ ನೆನಪಾಗುತ್ತಿದೆ.

ನಮ್ಮ ಮನೆಯಲ್ಲಿ ಟಿ‌ವಿ ಇಲ್ಲ. ಸಣ್ಣವರಿದ್ದಾಗ ಅಪ್ಪ ತರುತ್ತಿದ್ದ ಬಾಲಮಂಗಳ, ಮನೆಯಲ್ಲಿದ್ದ ಹಳೆಯ ಚಂದಮಾಮಗಳನ್ನು ನನಗೆ ಮೊದಲು, ನನಗೆ ಮೊದಲು ಎಂದು ಜಗಳ ಮಾಡಿ ಓದುತ್ತಿದ್ದೆವು. ಬೆಳಿಗ್ಗೆದ್ದು ಕಷಾಯ ಕುಡಿಯುವಾಗಿನಿಂದ ಹಿಡಿದು, ತಿಂಡಿ, ಊಟಗಳ ಸಮಯದಲ್ಲೂ ಕೈಯಲ್ಲಿ ಪುಸ್ತಕಗಳಿರುತ್ತಿದ್ದವು. ಊಟ ಮಾಡುವಾಗಾದರೂ ಪುಸ್ತಕ ಬದಿಗಿಡಬಾರದೇ ಎಂದು ಅಪ್ಪ, ಅಮ್ಮ ಬೈಯ್ಯುತ್ತಿದ್ದರು. ದೊಡ್ಡಕ್ಕ ಅಪ್ಪನ ಆಫೀಸಿನ ಲೈಬ್ರರಿಯಿಂದ ತಂದ, ಯಂಡಮೂರಿ ವೀರೇಂದ್ರನಾಥರ, ಅಂತಿಮ ಹೋರಾಟ ಪುಸ್ತಕವನ್ನು ರೋಚಕವಾಗಿ ನನಗೆ ಹಾಗೂ ಸಣ್ಣಕ್ಕನಿಗೆ ಓದುತ್ತಿದ್ದದ್ದು ಕಣ್ಣಿಗೆ ಕಟ್ಟಿದಂತಿದೆ. ಆಮೇಲೆ ಅವಳ ಬಾಣಂತನದಲ್ಲಿ ನಾನು ಎಷ್ಟೋ ಪುಸ್ತಕಗಳನ್ನು ಅವಳಿಗೆ ಓದಿ ಹೇಳಿ ಆ ಋಣ ತೀರಿಸಿದೆನೆನ್ನಿ! ಆಮೇಲೆ ಅಪ್ಪನ ಗ್ರಂಥ ಭಂಡಾರದಲ್ಲಿದ್ದ ಕುವೆಂಪು ಸಿಕ್ಕಿದರು. ಅವರ ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಮಲೆನಾಡಿನ ಚಿತ್ರಗಳು ಮುಂತಾದವನ್ನೆಲ್ಲ ಪ್ರೌಢಶಾಲೆ ಮುಗಿಯುವ ಮುನ್ನ ಓದಿ ಮುಗಿಸಿದ್ದಾಗಿತ್ತು. ಎಂಟನೆಯಲ್ಲೋ ಒಂಭತ್ತನೆಯಲ್ಲೋ ಕೇಂದ್ರ ಗ್ರಂಥಾಲಯದ ಲೈಬ್ರರಿ ಕಾರ್ಡ್ ಮಾಡಿಸಿಕೊಂಡೆವು; ನಾನು, ಸಣ್ಣಕ್ಕ. ಅಲ್ಲಿಂದ ಶುರು: ಯಂಡಮೂರಿ ವೀರೇಂದ್ರನಾಥ್, ತರಾಸು, ಅನಕೃ, ಪೂರ್ಣಚಂದ್ರ ತೇಜಸ್ವಿ, ರವೀಂದ್ರನಾಥ್ ಠಾಗೋರ್, ಪಿ ಎಸ್ ಶ್ರೀನಿವಾಸ್ ಮುಂತಾದವರನ್ನೆಲ್ಲಾ ಗಬಗಬನೆ ಓದಿ ಮುಗಿಸಿದೆವು. ಡಿಗ್ರಿಗೆ ಬರುವಾಗ ಮತ್ತೆ ಕೆಲ ಮಹನೀಯರು ಪರಿಚಯವಾದರು: ಬಿ ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ ಐಯಂಗಾರ್, ಮಾಸ್ತಿ, ಶಿವರಾಮ ಕಾರಂತ ಇತ್ಯಾದಿ. ಅಲ್ಲಿಯವರೆಗೆ ಹಳೆಗನ್ನಡ ಕಾವ್ಯಗಳನ್ನು ಓದಿರಲಿಲ್ಲ. ಮನೆಯಲ್ಲಿ ಅಪ್ಪ ರಾತ್ರಿಯೂಟ ಮುಗಿಸಿ ಕುಮಾರವ್ಯಾಸ ಭಾರತ, ರಾಮಾಯಣ ದರ್ಶನಂ, ರಾಮಾಶ್ವಮೇಧಮ್ ಗಳ ಭಾಗಗಳನ್ನು ರಾಗವಾಗಿ ಓದುವುದನ್ನು, ಅಮ್ಮ ಅವರ ಪಠ್ಯದಲ್ಲಿದ್ದ ಲಕ್ಷ್ಮೀಶನ ಜೈಮಿನಿ ಭಾರತದ ಭಾಗಗಳನ್ನೋ, ತೊರವೆ ರಾಮಾಯಣದ ಭಾಗಗಳನ್ನೋ ಗುನುಗಿಕೊಳ್ಳುವಾಗ ನಮ್ಮ ಓದು, ಕೆಲಸಗಳ ಮಧ್ಯ ಅಪ್ರಯತ್ನವಾಗಿ ಕೇಳಿಸಿಕೊಳ್ಳುತ್ತಿದ್ದುದೆಷ್ಟೋ ಅಷ್ಟೇ. ಅನೇಕ ಬಾರಿ ಅಪ್ಪ ನಮ್ಮನ್ನು ಕರೆದು ಕೂರಿಸಿ ಓದುತ್ತಿದ್ದರು. ಆಗ ಕೆಲವೊಮ್ಮೆ ಶಿಕ್ಷೆಯೆನಿಸುತ್ತಿತ್ತು. ಆದರೆ ಈಗ ಅವನ್ನು ನೆನೆಸಿಕೊಂಡಾಗ ಅಪ್ಪ-ಅಮ್ಮ ಎಂಥ ಮಹದುಪಕಾರ ಮಾಡುತ್ತಿದ್ದರು ಎನ್ನುವುದು ಅರಿವಾಗುತ್ತಿದೆ. ರಸವನ್ನು ಮನಃಪೂರ್ತಿಯಾಗಿ ಅನುಭವಿಸುವುದನ್ನು ತಿಳಿಸಿಕೊಟ್ಟರು. ಅನೇಕ ಬಾರಿ ಮನಸ್ಸಿಗೆ ಬೇಸರವಾದಾಗ, ಮನಸ್ಸು ಒತ್ತಡದಲ್ಲಿದ್ದಾಗ ಯೋಚನೆಯನ್ನು ಬೇರೆಡೆಗೆ ಹರಿಸಿ ಮನಸ್ಸು ಹಗುರ ಮಾಡಿಕೊಳ್ಳಲು ಪುಸ್ತಕಗಳು ಸಹಾಯಕ್ಕೆ ಒದಗುತ್ತಿದ್ದವು. ಎಂ ಎಸ್ಸಿ ಕೊನೆಯ ಸೆಮಿಸ್ಟರ್ ಪರೀಕ್ಷೆಯ ಹಿಂದಿನ ದಿನ ಬರೆಮನೆಯ ಶಾಂತ ವಾತಾವರಣದಲ್ಲಿ ಕುಳಿತು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಓದು ಮುಗಿಸಿದ್ದು ಒಂದು ಅತ್ಯಂತ ರಸಮಯ ನೆನಪು. ಶಿಕ್ಷಣಕ್ಕಾಗಿ ಮನೆಯಿಂದ ದೂರ ಹೋದರೂ ಓದು ನಿಲ್ಲಲಿಲ್ಲ. ಕೈಯ್ಯಲ್ಲಿದ್ದ ಹಣದ ಬಹುಭಾಗ ಪುಸ್ತಕಗಳನ್ನು ಕೊಳ್ಳುವುದಕ್ಕೇ ಖರ್ಚಾಗಿ ಬಿಡುತ್ತಿತ್ತು. ಸಣ್ಣವನಿದ್ದಾಗ ಯೋಚನೆಗಳ ಮೇಲೆ ತುಂಬಾ ಪರಿಣಾಮ ಬೀರಿದ್ದು ಯಂಡಮೂರಿಯಾದರೆ ಅನಂತರ ಗಾಢವಾಗಿ ಕಾಡಿದ್ದು ಭೈರಪ್ಪ. ಕೋರೋನ ಸಮಯದಲ್ಲಿ ದುರ್ಗಸಿಂಹನ ಪಂಚತಂತ್ರ ಓದಿ ಮುಗಿಸಿದ್ದು ಹಳಗನ್ನಡದ ಅನೇಕ ಶಬ್ದಗಳ ಪರಿಚಯವಾಗಲು ಕಾರಣವಾಯಿತು. ಸದ್ಯಕ್ಕೆ ಶತಾವಧಾನಿ ಆರ್ ಗಣೇಶ್, ಡಿವಿಜಿ ಮುಂತಾದ ಮಹನೀಯರ ಪುಸ್ತಕಗಳನ್ನೋದುವ ಪರ್ವ.

ಇನ್ನೂ ಓದಬೇಕು ಅಂದುಕೊಂಡ ಪುಸ್ತಕಗಳ ಪಟ್ಟಿಯ ಉದ್ದ ನೋಡುವಾಗ ಗಾಬರಿಯಾಗುತ್ತದೆ. ಬಹುಶಃ ಈ ಒಂದು ಜನ್ಮ ಸಾಲದೇನೋ. ಅದರಲ್ಲೂ ಕೈಯಲ್ಲಿ ಮೊಬೈಲ್ ಬಂದಮೇಲೆ ಈ ಸಂಶಯ ಸಕಾರಣವಾದದ್ದು ಅನಿಸುತ್ತಿದೆ.

-ಉಮಾಶಂಕರ ಕೇಳತ್ತಾಯ