ಶತಾವಧಾನಿ ಆರ್ ಗಣೇಶರ ವ್ಯಕ್ತಿತ್ವ, ಅಗಾಧ ಜ್ಞಾನ, ನಿರರ್ಗಳ ವಾಗ್ಧಾರೆಗಳಿಗೆ ಮರುಳಾಗದ ಸಹೃದಯರು
ಯಾರಿದ್ದಾರೆ? ಸನಾತನ ಧರ್ಮ, ಭಾರತೀಯ
ಸಂಸ್ಕೃತಿ ಮುಂತಾದ ವಿಷಯಗಳು ಬರುವಾಗ ಭಾವುಕರಾಗುವ, ಕುಕವಿತೆ, ಕುಕವಿಗಳನ್ನು ನಿರ್ದಾಕ್ಷಿಣ್ಯವಾಗಿ ತೆಗಳುವ (ಅದನ್ನು ಗೈವ ಅರ್ಹತೆಯೂ ಇರುವ), ಕೆಲವೊಮ್ಮೆ ತನ್ನನ್ನೂ ಹಾಸ್ಯ ಮಾಡಿಕೊಂಡು ನಕ್ಕುಬಿಡುವ, ಅಮೋಘ
ಕಲ್ಪನೆಗಳಿಂದ ಪುಷ್ಟವಾದ ಪದ್ಯಗಳನ್ನು ಲೀಲಾಜಾಲವಾಗಿ ಹೆಣೆದು ಆಶುವಾಗಿ ಹೇಳಬಲ್ಲ, ಮಹಾಭಾರತ, ರಾಮಾಯಣ, ಇತರ ಸಂಸ್ಕೃತ
ಕಾವ್ಯಗಳು, ಯಾವುದೇ ಭಾಷೆಗಳ ಸಾಹಿತ್ಯ,
ಛಂದಸ್ಸು, ವ್ಯಾಕರಣ ಮುಂತಾದವುಗಳ ಬಗೆಗೆ ಗಂಟೆಗಟ್ಟಲೆ ಮಾತನಾಡಬಲ್ಲ, ಮಾತನಾಡಿರುವ ಗಣೇಶರ ಬದುಕಿನ ಘಟ್ಟಗಳು, ವೇದಿಕೆಯಾಚೆಗಿನ
ವ್ಯಕ್ತಿತ್ವ, ಅವರ ಸ್ನೇಹಿತರು, ಅವರ
ಸಾಧನೆಗಳಿಗೆ ಕಾರಣವಾದ ಪ್ರಯತ್ನ, ಪ್ರೋತ್ಸಾಹಿಸಿದ ಹಿರಿಯರು
ಇತ್ಯಾದಿಗಳ ಬಗ್ಗೆ ಕುತೂಹಲ ಬಹುಶಃ ಎಲ್ಲರಿಗೂ ಸಹಜವಾಗಿಯೇ ಮೂಡಿರುತ್ತದೆ. ಈ ಅಂಶಗಳನ್ನು ನಮಗೆ
ಆಪ್ತವಾಗಿ ತೆರೆದಿಡುವ ಪುಸ್ತಕ ‘ವ್ಯಕ್ತಿವಿಭೂತಿ’. ಗಣೇಶರಿಗೆ ಆತ್ಮೀಯರಾದ, ಅನೇಕ ಕಾರ್ಯಗಳಲ್ಲಿ ಅವರ ಜತೆ
ಕೈಜೋಡಿಸಿರುವ, ಇತ್ತೀಚೆಗಷ್ಟೇ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾಬ್ರಾಹ್ಮಣ’ ಕೃತಿಯನ್ನು ಅವರೊಂದಿಗೆ ಸಂಸ್ಕೃತದಲ್ಲಿ
ಅನುವಾದಿಸಿ, ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದ ಯುವವಿದ್ವಾಂಸ
ಶಶಿಕಿರಣ್ ಬಿ ಎನ್ ರವರು ಇದರ ಕರ್ತೃ.
ಇರವು, ಅರಿವು, ಮತ್ತು ನಲವು ಎಂಬ ಮೂರು ಭಾಗಗಳಲ್ಲಿ ಗಣೇಶರ ಬದುಕಿನ ವಿವಿಧ
ಆಯಾಮಗಳನ್ನು ನಮ್ಮ ಮುಂದಿಡುತ್ತದೆ, ಈ ಪುಸ್ತಕ. ಮೂರೂ ಭಾಗಗಳು ಬೇರೆ ಬೇರೆ ರೀತಿಯಲ್ಲಿ
ಇಷ್ಟವಾಗುತ್ತವೆ. ‘ಇರವು’ವಿನಲ್ಲಿ ಅವರ
ಹುಟ್ಟು, ಬಾಲ್ಯ, ವಿದ್ಯಾರ್ಥಿ ಜೀವನ, ಮಾಡಿದ ವೃತ್ತಿಗಳು ಮುಂತಾದ ವಿವರಗಳಿವೆ. ಇವುಗಳ ಬಗ್ಗೆ ನನಗೆ ತುಂಬ ಕುತೂಹಲವಿದ್ದುದರಿಂದ
ಈ ಭಾಗ ಇಷ್ಟವಾಯಿತು. ಲಂಕಾ ಕೃಷ್ಣಮೂರ್ತಿ, ರಂಗನಾಥ ಶರ್ಮಾ ಮುಂತಾದ
ಮಹನೀಯರೊಡನೆ ಗಣೇಶರ ಒಡನಾಟದ ವಿವರಗಳು ಇನ್ನೂ ಹೆಚ್ಚು ಬೇಕಿತ್ತು ಎನಿಸಿತು. ಇವುಗಳ ಬಗ್ಗೆ
ಗಣೇಶರೇ ಹಲವು ಕಡೆ ಬರೆದುಕೊಂಡಿರುವುದರಿಂದ ಇದೊಂದು ಲೋಪವೆನ್ನುವುದು ತಪ್ಪಾದೀತೇನೋ. ಮುಂದಿನ
ಭಾಗ ‘ಅರಿವು’, ಅವರಿಂದ ರಚಿತವಾಗಿರುವ ಪದ್ಯ, ಸಾಹಿತ್ಯ, ಕಾವ್ಯಗಳು ಮುಂತಾದ ಸಾರಸ್ವತ ಕಾರ್ಯಗಳ ಸಂಕ್ಷಿಪ್ತ
ವಿವರವನ್ನು ಕೊಡುವುದಲ್ಲದೆ, ಅವಧಾನ ಕಲೆಗೆ ಅವರ ಕೊಡುಗೆಗಳನ್ನೂ ತಿಳಿಯಗೊಡುತ್ತದೆ.
ಕೆಲವು ಕವಿತೆಗಳ ಶಬ್ದಾಲಂಕಾರ, ವರ್ಣನೆ,
ಕಲ್ಪನೆಗಳು ನಮ್ಮನ್ನು ಮೂಕರನ್ನಾಗಿ ಮಾಡಿದರೆ ಕೆಲವು ಪದ್ಯಗಳ ಅರ್ಥಚಮತ್ಕಾರ ನಮ್ಮನ್ನು
ವಿಸ್ಮಿತರನ್ನಾಗಿಸುತ್ತದೆ. ಆಂಗ್ಲ ಪದಗಳಾದ, ಅದರಲ್ಲೂ ಗಣಿತಕ್ಕೆ
ಸಂಬಂಧಿಸಿದ ಸೈನ್, ಕೊಸೈನ್, ಟ್ಯಾನ್, ಕಾಟ್ ಪದಗಳನ್ನು ಅಳವಡಿಸಿ ಯುದ್ಧವನ್ನು ವರ್ಣಿಸುವ ಪದ್ಯ,
ಚಿತ್ರಕಾವ್ಯದ ಒಂದು ಪ್ರಕಾರವಾದ ಗರ್ಭಚಿತ್ರದ ಉದಾಹರಣೆಗಳು,
ಮೃತ್ಯುಜೀವನ, ಕುಂತೀಕ್ಲಾಂತಿ, ಧೂಮದೂತದ
ಪದ್ಯ, ಕವಿ ಯಾರು ಎಂಬುದನ್ನು ವಿವರಿಸುವ ಪದ್ಯ, ಅಗ್ರಾಮ್ಯಮ್, ಹಿಮಾಲಯದ ಬಗೆಗಿನ ಅನ್ಯೋಕ್ತಿ ಮುಂತಾದ ಶಕ್ತ
ಕವಿತೆಗಳನ್ನು ಓದುವಾಗ ಕೆಲವೊಮ್ಮೆ ಅಚ್ಚರಿಗೊಂಡರೆ ಮತ್ತೊಮ್ಮೆ ಆಘಾತಕ್ಕೊಳಗಾಗುತ್ತೇವೆ; ಒಮ್ಮೆ ಮನಸ್ಸು ಆರ್ದ್ರವಾದರೆ, ಮತ್ತೊಮ್ಮೆ ನಕ್ಕು
ಪ್ರಸನ್ನವಾಗುತ್ತದೆ, ಇನ್ನೊಮ್ಮೆ ಗಂಭೀರವಾಗಿ ವೇದಾಂತ ಚಿಂತನೆ
ಮಾಡುತ್ತದೆ. ಈ ಎಲ್ಲಾ ಭಾವಗಳನ್ನೂ ತಂದು ಸಹೃದಯರ ಮನಸ್ಸನ್ನು ತಟ್ಟುವ ಶಕ್ತಿ ಗಣೇಶರ
ಕವಿತೆಗಳಿಗಿವೆ. ನನಗೆ ತುಂಬಾ ಇಷ್ಟವಾದ ಹಲವು ಪದ್ಯಗಳಲ್ಲಿ ಈ ಕೆಳಗಿನದೂ ಒಂದು. ಇದರ ಆರ್ದ್ರಭಾವ
ಯಾರ ಮನವನ್ನೂ ಸೆರೆಹಿಡಿಯದಿರದು:
‘ಭಿಸ್ಸಾ ವಾ
ಭಿಸ್ಸಟಾ ವಾ ಭವತಿ ಮದುದರೋಷರ್ಬುಧಕ್ಷೋಭ ಶಾಂತ್ಯೈ
ದುಗ್ಧಂ ವಾ ಮಾಸರೋ ವಾ
ಶಮಯತಿ ನಿತರಾಂ ಮತ್ತೃಷಾಮ್ ವಾರಿ ವಾಪಿ|
ಕಂಥಾ ವಾ ರಾಂಕವಂ ವಾ
ರಚಯತಿ ಶಯನಂ ಮತ್ಕೃತೇ ಮೇದಿನೀ ವಾ
ಕಿಂತು
ಸ್ವಾಂತಸ್ಸಮೃದ್ಧ್ಯೈ ರಸಮಯಕವಿತಾಂ ಸಖ್ಯಯುಕ್ತಾಂ ಶ್ರಯೇsಹಮ್||’
(ಅಕ್ಕಿ ಕಾಳೊ ಬರಿ
ಸೀಕಲನ್ನವೋ ಮಣಿಸ್ಯಾವು ಎನ್ನ ಹಸಿವ
ಹಾಲೊ, ಗಂಜಿಯೋ, ಬರಿದೆ
ನೀರೊ ತಣಿಸ್ಯಾವು ಎನ್ನ ತೃಷೆಯ|
ಹರಕು ಬಟ್ಟೆಯೋ, ಶಾಲೊ, ನೆಲವೊ
ಮಾಡ್ಯಾವು ಎನಗೆ ಮೆತ್ತೆ
ಆದರೆನ್ನ ಮನ ತಣಿಯೆ
ಸಖರೊಡನೆ ಬೇಕು ರಸ್ಯಗವಿತೆ||)
ಕೊನೆಯ ಭಾಗವಾದ ‘ನಲವು’, ಗಣೇಶರ
ವ್ಯಕ್ತಿತ್ವವನ್ನು ಅವರ ಆತ್ಮೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ನಡೆದ ಕೆಲವು ಪ್ರಸಂಗಗಳ ಮೂಲಕ
ಓದುಗರ ಮುಂದಿಡುತ್ತದೆ. ಅವರ ಮುಖಚಹರೆಯ ವರ್ಣನೆಯಿಂದ ಆರಂಭವಾಗುವ ಈ ಭಾಗ, ಲೇಖಕರ ಗಣೇಶರೊಂದಿಗಿನ ಮೊದಲನೆಯ ಭೇಟಿಯ ಸಂದರ್ಭವನ್ನು ವಿವರಿಸಿ ಅನಂತರ ಅವರ ಸ್ವಭಾವ, ನಡತೆಗಳನ್ನು ವಿವಿಧ ಘಟನೆಗಳ ಮೂಲಕ ತೆರೆದಿಡುತ್ತದೆ. ಕುಣಿಯಲು ಹೋಗಿ ಎಡವಟ್ಟು
ಮಾಡಿಕೊಂಡಾಗಲೂ ಆಶುವಾಗಿ ಪದ್ಯ ಹೇಳಿದುದು, ಯುರೋಪ್ ಪ್ರವಾಸ, ರೈಲು ನಿಲ್ದಾಣದ ಪ್ರಸಂಗ, ರೂಪಾಯಿ ನೋಟುಗಳನ್ನು ಹರಿದುದು, ಶೃಂಗೇರಿಶ್ರೀಗಳ ಉಪಸ್ಥಿತಿಯಲ್ಲಿ ಅವಧಾನಗೈದುದು,
ದುರ್ಗಾಸಪ್ತಶತಿಯ ಕುರಿತ ಭಾಷಣದ ಸಂದರ್ಭ, ಮುಂತಾದ ರಸಪ್ರಸಂಗಗಳು ಅವರ
ಬದುಕಿನಲ್ಲಿ ಕಾವ್ಯವ್ಯಸನ, ನಸನಸೆಯ ಸ್ವಭಾವ,
ಅವಸರ, ಸಮಯ ಪರಿಪಾಲನೆ, ಆತ್ಮವಿಶ್ವಾಸ, ವಿನಯ, ಸ್ನೇಹಗುಣ, ಹೃದಯವಂತಿಕೆ, ತಮಗೆ ನೆರವು ನೀಡಿದವರನ್ನು ಸದಾ ಸ್ಮರಿಸುವ ಕೃತಜ್ಞತೆ,
ಅನ್ನರಾಸಿಕ್ಯ, ಸಂಗೀತಪ್ರಿಯತೆ ಇತ್ಯಾದಿಗಳನ್ನು ವಸ್ತುನಿಷ್ಠವಾಗಿ
ವಿವರಿಸಿ ಅವರನ್ನು ನಮಗೆ ಆಪ್ತವಾಗಿಸುತ್ತವೆ.
ಗೋಖಲೆ ಸಾರ್ವಜನಿಕ ವಿಚಾರ
ಸಂಸ್ಥೆಯ ಯುಟ್ಯೂಬ್ ಚಾನಲ್ ನಲ್ಲಿ ಭಾಷಣ, ಅವಧಾನಗಳಲ್ಲಿ ಶಶಿಕಿರಣರ ಮಾತಿನ ಮಾಧುರ್ಯವನ್ನು ಒಂದು ಬಾರಿ ಕೇಳಿದವರು ಮರೆಯಲಾರರು.
ಸುಲಲಿತವಾಗಿ, ಸ್ಪಷ್ಟವಾಗಿ,
ಸರಿಯಾದ ಕನ್ನಡ, ಸಂಸ್ಕೃತಶಬ್ದಗಳನ್ನು ಸರಿಯಾದ ಸ್ಥಳದಲ್ಲಿ ಬಳಸುತ್ತಾ ನಿರರ್ಗಳವಾಗಿ ಮಾತನಾಡುವ ಅವರು, ಈ ಕೃತಿಯಲ್ಲೂ ಅದನ್ನೇ ಅಳವಡಿಸಿಕೊಂಡಿದ್ದಾರೆ. ಇಡೀ ಕೃತಿಯಲ್ಲಿ ಲೇಖಕರು ಎಲ್ಲೂ ಗಣೇಶರನ್ನು
ಕುರಿತು ಉತ್ಪ್ರೇಕ್ಷೆಗೈದಿಲ್ಲ ಎಂಬುದನ್ನು ಅಗತ್ಯವಾಗಿ ಹೇಳಬೇಕು. ಗಣೇಶರ ಕೋಪ, ಅವಸರ, ಮರೆವು ಮುಂತಾದ ಸ್ವಭಾವಗಳೂ ಇತರ ಸ್ವಭಾವಗಳಂತೆಯೇ
ವಸ್ತುನಿಷ್ಠವಾಗಿ ನಮ್ಮ ಮುಂದಿಡಲ್ಪಟ್ಟಿವೆ. ವಸ್ತುತಃ, ಪುಸ್ತಕದ
ಕೊನೆಯಲ್ಲಿ ಲೇಖಕರೇ ಹೇಳಿಕೊಂಡಂತೆ, ಗಣೇಶರ ವಿಷಯದಲ್ಲಿ ಅತಿಶಯೋಕ್ತಿಯೂ
ಅಲಂಕಾರವೆನಿಸದು, ಎಲ್ಲ ಬಗೆಯ ಉಪಮೆಗಳೂ ನ್ಯೂನೋಪಮೆಯೇ ಆಗುವುವು.
ಒಟ್ಟಿನಲ್ಲಿ ನಮ್ಮ ಕಾಲದ ‘ವಿದ್ವಲ್ಲೋಕದ ವಿಸ್ಮಯ’
ಗಣೇಶರ ಕುರಿತು ಪರಿಚಯಿಸುವ ಇಂಥ ಪುಸ್ತಕವೊಂದು ಅತ್ಯಗತ್ಯವಾಗಿ ಬೇಕಿತ್ತು ಎನ್ನುವುದಂತೂ ಸತ್ಯ.
ಅದನ್ನು ಪೂರೈಸಿದ ಶಶಿಕಿರಣರಿಗೆ ನಮ್ಮ ಕೃತಜ್ಞತೆಗಳು ಅಗತ್ಯವಾಗಿ ಸಲ್ಲಬೇಕು.
- ಉಮಾಶಂಕರ್ ಕೆ