(ಚಿತ್ರಕೃಪೆ: ಅಂತರ್ಜಾಲ)
ಮನೆಯೊಂದು ಇರಬೇಕು
ಕೊಂಬೆಗಳ ಮರೆಯಲ್ಲಿ
ಹೊನ್ನಕ್ಕಿ ಬಚ್ಚಿಟ್ಟ ಗೂಡಿನಂತೆ|
ಜಗದೆಲ್ಲ ಗದ್ದಲವ-
ನೊಳಗಿನಿತು ಬಿಡದಂತೆ
ಇರಬೇಕು ಕಾನನದ ಸುತ್ತುಕೋಟೆ|
ಬೆಳಗಿನೆಳೆ ಬಿಸಿಲಿನಲಿ
ಪಿಕಳಾರ ಕುಟುರಗಳು
ಕುವರವ್ಯಾಸನ ಪದಕೆ ಶೃತಿಗೈಯಬೇಕು|
ಮಧ್ಯಾಹ್ನಕಾಲದಲಿ
ಚಿಗುರ ತಂಬುಳಿಯೂಟ
ಸವಿದು ತಂಪಿನ ನೆಲಕೆ ಒರಗಬೇಕು|
ಮುಸ್ಸಂಜೆ ಕವಿದಾಗ
ಗಂಭೀರ ಮೌನದಲಿ
ಮನವು ಶಾಂತಿಯ ಕಣಿವೆಗಿಳಿಯಬೇಕು|
ನಿಶೆಯಲೊಳಕೋಣೆಯಾ
ಬಿಸುಪಿನಲಿ ನಿದ್ರಿಸಿರೆ
ನಿನ್ನೆ ನಾಳೆಗಳನ್ನು ಮರೆಯಬೇಕು|
- ಉಮಾಶಂಕರ್ ಕೆ