Thursday, September 15, 2022

ಮನೆ

 

                                                                                                           (ಚಿತ್ರಕೃಪೆ: ಅಂತರ್ಜಾಲ)

ಮನೆಯೊಂದು ಇರಬೇಕು
ಕೊಂಬೆಗಳ ಮರೆಯಲ್ಲಿ
ಹೊನ್ನಕ್ಕಿ ಬಚ್ಚಿಟ್ಟ ಗೂಡಿನಂತೆ|

ಜಗದೆಲ್ಲ ಗದ್ದಲವ-
ನೊಳಗಿನಿತು ಬಿಡದಂತೆ
ಇರಬೇಕು ಕಾನನದ ಸುತ್ತುಕೋಟೆ|

ಬೆಳಗಿನೆಳೆ ಬಿಸಿಲಿನಲಿ
ಪಿಕಳಾರ ಕುಟುರಗಳು
ಕುವರವ್ಯಾಸನ ಪದಕೆ ಶೃತಿಗೈಯಬೇಕು|

ಮಧ್ಯಾಹ್ನಕಾಲದಲಿ
ಚಿಗುರ ತಂಬುಳಿಯೂಟ
ಸವಿದು ತಂಪಿನ ನೆಲಕೆ ಒರಗಬೇಕು|

ಮುಸ್ಸಂಜೆ ಕವಿದಾಗ
ಗಂಭೀರ ಮೌನದಲಿ
ಮನವು ಶಾಂತಿಯ ಕಣಿವೆಗಿಳಿಯಬೇಕು|

ನಿಶೆಯಲೊಳಕೋಣೆಯಾ
ಬಿಸುಪಿನಲಿ ನಿದ್ರಿಸಿರೆ
ನಿನ್ನೆ ನಾಳೆಗಳನ್ನು ಮರೆಯಬೇಕು|

- ಉಮಾಶಂಕರ್ ಕೆ

No comments:

Post a Comment