(ಚಿತ್ರಕೃಪೆ: ಅಂತರ್ಜಾಲ)
ಖಲೀಲ್ ಗಿಬ್ರಾನ್ ಬರೆದನೆಂದು ಹೇಳಲಾದ ಆಂಗ್ಲ ಪದ್ಯವೊಂದರ ಭಾವಾನುವಾದ, ಭೋಗಷಟ್ಪದಿಯಲ್ಲಿ:
ನದಿಯು ಹರಿದು ಬರುತ ತಿರುವ-
ಲಿದಿರು ಕಂಡ ಶರಧಿಯನ್ನು
ಮೊದಲಬಾರಿ ಕಾಣೆ ಭಯದೊಳದುರಿಬಿಡುವಳು|
ಮುದದಿ ಬಳುಕಿಯಿಳಿದ ಶಿಖರ-
ವದರ ತಳದಿ ಫಣಿಯ ತೆರದಿ
ಮದದೊಳುಕ್ಕಿ ಹರಿದ ಪಥವ ತಿರುಗಿ ನೋಳ್ಪಳು||
ಇದಿರು ಮೈಯ ಹರಡಿ ನಿಂತ
ಮದಿಸಿದಲೆಗಳಂಚ ಸೆರಗು
ಹೊದೆದ ಕಡಲ ಪೊಗುವುದೆಂದರಂತ್ಯವಲ್ಲವೇ?|
ಬದಲುಹಾದಿಯಿಲ್ಲವಾಯ್ತು
ಪದವ ಹಿಂದಕಿಡಲಸಾಧ್ಯ-
ವದನು ಜಗದೊಳೆಸಗಲಾರು ಶಕ್ತರಿರ್ಪರು?||
ಹೊಳೆಯು ಕಡಲ ಹೊಗಲೆಬೇಕು
ಅಲೆಗಳೊಡನೆ ಸೇರಬೇಕು
ಇಳೆಯ ನಿಯಮವಿದುವೆ ನೋಡ ಭಯವ ಗೆಲ್ಲಲು|
ಹೊಳೆಗೆ ಕಡಲ ಸೇರ್ಕೆಯದರ
ವಿಲಯವಲ್ಲ ಬದಲು ತಾನೆ
ಜಲಧಿಯಾಗಿ ಮಾರ್ಪುಗೊಳ್ವ ಶುಭದ ಗಳಿಗೆಯು||
- ಮೂಲ: ಖಲೀಲ್ ಗಿಬ್ರಾನ್
ಭಾವಾನುವಾದ - ಉಮಾಶಂಕರ್ ಕೆ.
No comments:
Post a Comment