Monday, June 10, 2024

ಆ ಬೈಗು..

                                                                                        (ಚಿತ್ರ: ಉಮಾಶಂಕರ ಕೇಳತ್ತಾಯ)

ಬೈಗಿನ ಹೊತ್ತು... ಲಕ್ಷೋಪಲಕ್ಷವೃಕ್ಷಪತ್ರಗಳು ಮುಳುಗುವ ಸೂರ್ಯನ ಕೆಂಗಾಂತಿಯನ್ನು ಪ್ರತಿಫಲಿಸಿ ಆತನಿಗೆ ವಿದಾಯ ಹೇಳುತ್ತಿದ್ದವು. ತಮ್ಮ ಕೋಟ್ಯಂತರ ಹಸ್ತಗಳಿಂದ ಸೂರ್ಯನಿಗೆ ಸಾಯಂಕಾಲದ ಆರತಿಯನ್ನು ಎತ್ತುತ್ತಿದ್ದಂತೆ ಅವುಗಳು ಕಾಣಿಸುತ್ತಿದ್ದವು. ಕಾಡಿನ ಗಂಭೀರ ಮಹನ್ಮೌನವನ್ನು ಹೆಚ್ಚುಗೊಳಿಸುತ್ತಿದ್ದ ನಿಶಾಚರ ಹಕ್ಕಿಗಳ ಸದ್ದು ಗರ್ಭಗುಡಿಯ ನೀಲಾಂಜನದ ಮಂದಬೆಳಕಿನಲ್ಲಿ ಮೆಲುವಾಗಿ ಮಂತ್ರಪಠಿಸುತ್ತಿದ್ದ ಅರ್ಚಕರ ಧ್ವನಿಯಂತಿತ್ತು. ಸ್ವರ್ಣಾ ನಿಶ್ಶಬ್ದವಾಗಿ ಮನಸ್ಸನ್ನೆಲ್ಲಾ ಅರಿತವಳಂತೆ ಸಾಂತ್ವನ ನೀಡುವವಳಂತೆ ಹರಿಯುತ್ತಿದ್ದಳು. ನದಿಯ ಮೇಲೆ ಬಾಗಿದ್ದ ದಟ್ಟ ಎಲೆಗಳಿದ್ದ ವೃಕ್ಷಗಳು ಏನೋ ನಿಗೂಢತೆಯನ್ನು ಆ ಇಳಿಸಂಜೆಯ ನೀರವತೆಯಲ್ಲಿ ತಮ್ಮೊಳಗೆ ಘನೀಭವಿಸಿಕೊಂಡಂತೆ ಕಂಡುಬರುತ್ತಿದ್ದವು. ಏನೋ ಕಾತರಪೂರ್ಣ ಸ್ತಬ್ಧ ವಾತಾವರಣ... ಹೋಗಿ ಗೂಡಿಗೆ ಸೇರಿಕೊಳ್ಳುವ ಸಮಯ ಎಂದು ಕೋಟ್ಯಂತರ ವರ್ಷಗಳ ಹಿಂದಿನ ಮಾನವನಿಗೆ ನೀಡುತ್ತಿದ್ದ ಸೂಚನೆಯಂತೆ ನನಗೂ ಈಗ ಪ್ರಕೃತಿ ನೀಡುತ್ತಿದ್ದಳು. ಅವಳಿಗೆ ಅದೆಂತಹ ಪ್ರಚಂಡ ಶಕ್ತಿ..! ತನ್ನ ಪ್ರಶಾಂತತೆಯಿಂದ ಮನುಷ್ಯನ ಎಲ್ಲ ಚಿತ್ತವೃತ್ತಿಗಳನ್ನೂ ಕೆಲಕಾಲ ಶಮನಗೊಳಿಸುವ ಶಾಂತ, ದೃಢ ಶಕ್ತಿ..! ಸಮಸ್ತ ವಿಶ್ವವನ್ನೂ ಶಾಂತಿಯ ಚಿಪ್ಪಿನೊಳಗೆ ತೂರಿಸಿಬಿಡುವ ಶಕ್ತಿ..! ಮನಸ್ಸಿನಲ್ಲಿ ಅದೇನೋ ಉನ್ನತಭಾವವನ್ನು ತುಂಬಿ ವಿಶ್ವವ್ಯಾಪೀ ಸರ್ವಶಕ್ತನಿಗೆ ವಿನಮ್ರವಾಗಿ ಪ್ರಾಂಜಲತೆಯಿಂದ ಮಣಿದು, ಕೃತಜ್ಞತೆಯಿಂದ ನಮಸ್ಕರಿಸಿಬಿಡಬೇಕೆನ್ನುವ ಭಾವವನ್ನುಕ್ಕಿಸುವ ಪವಿತ್ರ ಶಕ್ತಿ..! ಅಲ್ಲಿ ಮಾತಿಗೆ ಮನಸಿಲ್ಲ. ಮನಸ್ಸೂ ನಿಶ್ಶಬ್ದವಾಗಿ ಕುಳಿತುಬಿಟ್ಟಿತ್ತು. ಏನೋ ಅರಿಯದ ಸಂತೃಪ್ತಿ ಮನಸ್ಸನ್ನೆಲ್ಲಾ ಆವರಿಸಿತು. ಆ ಆಹ್ಲಾದಕರ ಭಾರವನ್ನು ಹೊತ್ತು ಮೆಲ್ಲ ಮೆಲ್ಲನೆ ನಮ್ಮ ಗೂಡಿನತ್ತ ನಡೆದೆವು.

No comments:

Post a Comment