Tuesday, August 13, 2024

ಅಷ್ಟಾವಧಾನದಲ್ಲಿ ಕೊಟ್ಟ ಆಶುಕವಿತೆಯ ವಸ್ತುಗಳು

ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರ ಅಷ್ಟಾವಧಾನದಲ್ಲಿ ಆಶುಕವಿತಾವಿಭಾಗಕ್ಕೆ ಪೃಚ್ಛಕನಾಗಿ ಭಾಗವಹಿಸುವ ಸುಯೋಗ ದೊರಕಿತ್ತು. ಕೆಳಗಿರುವವು ಅಲ್ಲಿ ಕೇಳಿದ ವಿಷಯಗಳು ಹಾಗೂ ಬರೆದುಕೊಂಡು ಹೋದ ಪದ್ಯಗಳು (ಸಮಯಾಭಾವದಿಂದಾಗಿ ಮೂರು ವಿಷಯಗಳನ್ನು ಮಾತ್ರ ಕೇಳುವುದಾಯಿತು. ಕೊನೆಯ ಸುತ್ತಿನಲ್ಲಿ ಕೆಳಗಿನ ಚಿತ್ರವನ್ನೇ ವಿಷಯವಾಗಿ ಕೊಟ್ಟದ್ದು).

೧. ಗಂಗೆಯಲ್ಲಿ ತೇಲಿಬಿಟ್ಟ ಹಣತೆಗಳು

ತೇಲುತುಂ ಬಹ ಫುಲ್ಲಕೋಮಲ ಹೇಮಪುಷ್ಪದ ಮಾಲೆಯೇಂ?
ಫಾಲಚಂದ್ರನ ನಾಗಮಾಲೆಗಳುತ್ತಮಾಂಗದ ಕಾಂತಿಯೇಂ?|
ಕಾಲವಾಹಿನಿಯಲ್ಲಿ ತೇಲ್ವ ಮಹಾನುಭಾವರ ದೀಪ್ತಿಯೇಂ?
ನೀಲ ಸುಂದರ ರಾತ್ರಿಯೊಳ್ ಸುರಗಂಗೆ ಕಾಶಿಯೊಳೊಪ್ಪುಗುಂ||
(ಮಲ್ಲಿಕಾಮಾಲೆ)

ತೇಲುತ್ತಾ ಬರುತ್ತಿರುವ ಅರಳಿದ ಸುಕೋಮಲ ಸೇವಂತಿಗೆಯ ಮಾಲೆಯೋ? ಶಿವನ ಆಭರಣಗಳಾದ ನಾಗಗಳ ಹೆಡೆಯ ಮೇಲಣ ಮಣಿಯ ಕಾಂತಿಯೋ? ಕಾಲವೆಂಬ ನದಿಯಲ್ಲಿ ತೇಲುವ ಮಹಾನುಭಾವರ ತೇಜಸ್ಸೋ? ಈ ರೀತಿ ಸುಂದರ ರಾತ್ರಿಯಲ್ಲಿ ಕಾಶಿಯ ದೇವಗಂಗೆ ಶೋಭಿಸುತ್ತಿದ್ದಾಳೆ.

೨. ಹೊಲಿಗೆಯ ಸೂಜಿ

ತನ್ನೊಳ್ ರಂಧ್ರಮನಿಟ್ಟ ಕೋಪಕಿನಿತುಂ ಸಾಧಿಪ್ಪೆಯೇಂ ಸೂಜಿಯೇ?
ಭಿನ್ನಂಗೊಂಡಿಹ ಶಲ್ಯಮಂ ಬಿಡದೆ ನೀಂ ಚುಚ್ಚುತ್ತೆ ನೋಯಿಪ್ಪೆಯೇಂ?|
ಚೆನ್ನೊಳ್ ಸಂದಿಹ ದಾರದಾ ಗುಣಗಳಿಂ ನೀನಿನ್ನು ಬಾಳಿರ್ಪೆಯೈ
ಬೆನ್ನೊಳ್ ನಿಂತಪರೂಪಮಾದ ಪರಿಯೊಳ್ ಒಂದಾಗಿಪಳ್ ಬಟ್ಟೆಯಂ||
(ಶಾರ್ದೂಲವಿಕ್ರೀಡಿತ)

ಸೂಜಿಯೇ, ನಿನ್ನಲ್ಲಿ ರಂಧ್ರವನ್ನಿಟ್ಟ ಕೋಪಕ್ಕೆ ಈ ರೀತಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದೀಯೇನು? ಹರಿದ ಶಲ್ಯವನ್ನೂ ಬಿಡದೆ ಚುಚ್ಚಿ ಚುಚ್ಚಿ ನೋಯಿಸುತ್ತಿರುವೆ. ಚೆನ್ನಾಗಿ ಹೊಂದಿಕೊಂಡು ಹೋಗುವ ದಾರವಿದ್ದುದರಿಂದ ನೀನಿನ್ನೂ ಬದುಕಿದ್ದೀಯೆ. ಆಕೆ ನಿನ್ನ ಹಿಂದೆ ನಿಂತು ಬಟ್ಟೆಗಳನ್ನು ಒಂದಾಗಿಸುತ್ತಿದ್ದಾಳೆ. 
(‘ದಾರ’ ಶಬ್ದಕ್ಕೆ ನೂಲು ಎಂದು ಮಾತ್ರವಲ್ಲದೆ ಮಡದಿ ಎಂಬ ಅರ್ಥವೂ ಇದೆ. ಹಾಗೆಯೇ ‘ಬಟ್ಟೆ’ ಎಂದರೆ ವಸ್ತ್ರ ಹಾಗೂ ದಾರಿ ಎಂಬೆರಡು ಅರ್ಥಗಳಿವೆ.) 

೩. ಚಿತ್ರಕ್ಕೆ ಪದ್ಯ

ಕಪ್ಪುಮೋಡಗಳ ಹತ್ತಿಯುಂಡೆಯನು ಬಾಂದಳದಿ ಹರಡಿ ಚೆಲ್ಲಿ|
ವಾಯುದೇವನದೊ ಮಳೆಯಹನಿಗಳನು ನೂಲುತಿಹನೊ ಇಲ್ಲಿ||
ಹೊನ್ನ ಸೆರಗಿನಲಿ ಬುರುಗಿನಂಚುಗಳ ಚಂದದಿಂದ ಹೊಸೆದು|
ಅಲೆಯ ಮಗ್ಗದಲಿ ನೇಯ್ದ ನೀಲಿಯೇ ಶರಧಿಯಾಯಿತೆಸೆದು||
(ಸಂತುಲಿತ ಮಧ್ಯಾವರ್ತಗತಿ)

ಕಪ್ಪುಮೋಡಗಳೆನ್ನುವ ಹತ್ತಿಯ ಉಂಡೆಗಳನ್ನು ಬಾನಿನಲ್ಲಿ ಹರಡಿ ವಾಯುದೇವನು ಮಳೆಯಹನಿಗಳೆಂಬ ನೂಲನ್ನು ನೂಲುತ್ತಿದ್ದಾನೋ? ಚಿನ್ನದ ಸೆರಗಿಗೆ ನೊರೆಗಳೆನ್ನುವ ಅಂಚನ್ನು ಹೊಲಿದು ಅಲೆಗಳೆನ್ನುವ ಮಗ್ಗದಲ್ಲಿ ನೀಲಿಯನ್ನೇ ನೇಯಲು ಸಮುದ್ರವೆಂಬ ಸೀರೆಯು ಉಂಟಾಗಿ ಶೋಭಿಸುತ್ತಿರುವಂತೆ ಕಾಣಿಸುತ್ತಿದೆ.

ಅವಧಾನದಲ್ಲಿ ಎರಡನೇ ಬಾರಿಗೆ ಭಾಗವಹಿಸುವ ಭಾಗ್ಯವನ್ನು ಒದಗಿಸಿಕೊಟ್ಟ, ಸದಾ ಸಹೋದರ ಪ್ರೇಮದಿಂದ ಕಂಡು ಪ್ರೋತ್ಸಾಹಿಸುವ, ವಿದ್ವಾನ್ ಮಹೇಶ ಭಟ್ ಹಾರ್ಯಾಡಿಯವರಿಗೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ. 
ಧನ್ಯೋಸ್ಮಿ!🙏🙏🙏

- ಉಮಾಶಂಕರ್ ಕೆ

No comments:

Post a Comment