(ಚಿತ್ರ: ಉಮಾಶಂಕರ್ ಕೆ)
"ನದಿಯಾಗಬೇಕಿತ್ತು ನಾನು, ನಿನ್ನಂತೆ"
ಕಾಡೊರೆಯಿತು ಓಡುತ್ತಿದ್ದ ನದಿಗೆ,
"ನದಿಯಾಗಬೇಕಿತ್ತು ನಾನು, ನಿನ್ನಂತೆ
ಯಾವಾಗಲೂ ಓಡುತ್ತಾ
ನಿತ್ಯ ಹೊಸ ದೃಶ್ಯಗಳ ನೋಡುತ್ತಾ
ಸಾಗರವ ಸೇರುತ್ತಾ
ಇರಬೇಕಿತ್ತು ನಾನೂ, ಉತ್ಸಾಹದಿಂದ ಸಾಗುತ್ತಾ
ನೀರಾದ ಬೆಳಕಂತೆ ಹರಿಯುತ್ತಾ
ನಿರಂತರ ಅಲೆಯುತ್ತಾ..."
"ಆದರೆ ನಾನು!? ಕೇವಲ ಸೆರೆಯಾಳು
ಬಂಧಿಸಲ್ಪಟ್ಟಿದ್ದೇನೆ ಭುವಿಗೆ,
ಬೆಳೆದು ಹಳತಾಗುತ್ತೇನೆ ನಾನು ಮೌನದಲ್ಲಿ;
ಅದರಲ್ಲೇ ನನ್ನ ಜೀವನ,
ನಿಶ್ಶಬ್ದದಲ್ಲೇ ಲೀನವಾಗುತ್ತೇನೆ ನಾನು.
ವರುಷಗಳ ನಂತರ ನನ್ನದೇನೂ ಉಳಿಯುವುದಿಲ್ಲ;
ಇಲ್ಲ! ಉಳಿಯುವುದು ಮುಷ್ಟಿ ತುಂಬ ಬೂದಿ"
"ಕಾಡಾಗಬೇಕಿತ್ತು ನಾನು, ನಿನ್ನಂತೆ"
ಅಲವತ್ತುಗೊಂಡಿತು ನದಿಯು
"ಕಾಡಾಗಬೇಕಿತ್ತು ನಾನು, ನಿನ್ನಂತೆ,
ಇರುತ್ತೀಯ ನೀನು ಅಂತರ್ಮುಖಿಯಂತೆ
ನಿದ್ದೆಯೋ? ಎಚ್ಚರವೋ?
ಸುತ್ತಲಿದೆ ಮಡುಗಟ್ಟಿದ ಮಹನ್ಮೌನ
ಆಹ್ಲಾದವಾಗಿದೆ ಅಗಾಧ ಏಕಾಂತತೆ
ಇದ್ದೀಯ ನೀನು ಹಸಿರು ವಜ್ರದಂತೆ,
ಬೆಳದಿಂಗಳಲ್ಲಿ ಬೆಳಗುತ್ತಾ
ಅರಿವಿಗೆಟುಕದ ರಹಸ್ಯವ ಪಿಸುಗುಡುತ್ತಾ.
ವರ್ಣಮಯ ವಸಂತದ ಮುಕುರ ನೀನು
ಪ್ರತಿಫಲಿಸುತ್ತದರ ಬೆಡಗು-ಅಂದಗಳನ್ನು
ಪ್ರತಿವರುಷವೂ ಹೊಸತನವೆ ನಿನ್ನ ಭವಿತವ್ಯ
ಪ್ರೇಮಿಗಳಿಗೆ ನೀನೊಂದು ನೆರಳಿನಾಶ್ರಯ.
ನನ್ನನ್ನು ನೋಡು! ಯಾವಾಗಲೂ ಓಡುತ್ತಾ
ನನ್ನಿಂದಲೂ ದೂರ, ಬಹಳಷ್ಟು ದೂರ
ಓಟ, ಅಗಾಧ ಓಟ, ದಿಗ್ಭ್ರಮೆಯ ಅಲೆದಾಟ
ಸಿಕ್ಕಿದ್ದು ಏನಿಲ್ಲ ಅರ್ಥವಿಲ್ಲದೀ ಓಟದಿಂದ
ಕನಸಾಯಿತಿನ್ನೆಂದು ಅನಂತ ಶಾಂತಿ
ಛೇ! ಕಾಡಾಗಬೇಕಿತ್ತು ನಾನು ನಿನ್ನಂತೆ"
ತಿಳಿಯಲಾರವು ಇನ್ನೊಬ್ಬರ ಮನದ ಭಾವಗಳು
ಕೇಳುವವರಾರು ಅವನ ಅಸ್ತಿತ್ವ ನಿಜವೇ
ಇಲ್ಲಾ, ಅವನೊಂದು ನೆರಳೇ?
ನಸುಗತ್ತಲಲಿ ಗುರಿಯಿಲ್ಲದೇ
ನಡೆಯುತ್ತದ್ದವನೊಬ್ಬ ತನ್ನನ್ನು
ತಾನೇ ಕೇಳಿಕೊಂಡ- "ನಾನು ಯಾರು?
ನದಿಯೇ? ಕಾಡೇ? ಇಲ್ಲಾ ಇವೆರಡೂ?
ನದಿ ಹಾಗೂ ಕಾಡು?
ನದಿ ಮತ್ತು ಕಾಡು.
ಮೂಲ: ಜಲಾಲುದ್ದೀನ್ ರೂಮಿ
ಅನುವಾದ: ಉಮಾಶಂಕರ್. ಕೆ
No comments:
Post a Comment