(ಚಿತ್ರಕೃಪೆ: ಅಂತರ್ಜಾಲ)
ಅಮರುಕ ಕವಿಯ ಅಮರುಶತಕದ ಪದ್ಯವೊಂದರ ಭಾವಾನುವಾದ, ಮಲ್ಲಿಕಾಮಾಲೆಯಲ್ಲಿ:
ಅಂದು ದೇಹಗಳೊಂದೆಯೆನ್ನುವಭಿನ್ನಭಾವವದೀರ್ವರೊಳ್|
ಕುಂದಲಾಶೆಗಳೆನ್ನೊಳಾಗಲೆ ನೀನು ನಲ್ಲನು ನಾಂ ಪ್ರಿಯೇ||
ಇಂದು ನಾವ್ಗಳು ಗಂಡಹೆಂಡಿರು ಬೇರೆಯೇನನು ಪೇಳ್ವೆನೋ|
ಕಂದಿದೆನ್ನಯ ಪ್ರಾಣದೋಳಿಯ ವಜ್ರಗಾಢತೆಯೀ ಫಲಂ||
[ಮೊದಲು ನಾವಿಬ್ಬರೂ ಒಂದೇ ದೇಹವೇನೋ ಎಂಬಷ್ಟು ಆತ್ಮೀಯರಾಗಿದ್ದೆವು. ಅನಂತರ ನೀನು ಪ್ರಿಯತಮ, ನಾನು ಹತಾಶಳಾದ ಪ್ರಣಯಿನಿಯಾದೆ. ಈಗ ನೀನು ಪತಿ, ನಾನು ಪತ್ನಿ ಎಂಬುದಷ್ಟೇ ಉಳಿದಿದೆ. ನಾನು ವಜ್ರದಂತೆ ಕಠಿಣವಾದುದರಿಂದ ಇದನ್ನು ಇನ್ನೂ ಅನುಭವಿಸುತ್ತಿದ್ದೇನೆ. (ಸಂಬಂಧದಿಂದ ಹತ್ತಿರವಾಗುತ್ತಾ ಬಂದರೂ ಮಾನಸಿಕವಾಗಿ ಅಂತರ ಹೆಚ್ಚುತ್ತಿದೆ.)]
ಮೂಲ (ಶಿಖರಿಣೀ): ತಥಾಭೂದಸ್ಮಾಕಂ ಪ್ರಥಮಮವಿಭಿನ್ನಾ ತನುರಿಯಂ
ತತೋ ನು ತ್ವಂ ಪ್ರೇಯಾಮಹಮಪಿ ಹತಾಶಾ ಪ್ರಿಯತಮಾ|
ಇದಾನೀಂ ನಾಥಸ್ತ್ವಂ ವಯಮಪಿ ಕಲತ್ರಂ ಕಿಮಪರಂ
ಮಯಾಪ್ತಂ ಪ್ರಾಣಾನಾಂ ಕುಲಿಶಕಠಿನಾನಾಂ ಫಲಮಿದಂ||
-ಉಮಾಶಂಕರ್ ಕೆ
No comments:
Post a Comment