Saturday, November 26, 2022

ನದಿ ಮತ್ತು ಕಾಡು


                                                                                   (ಚಿತ್ರ: ಉಮಾಶಂಕರ್ ಕೆ)

"ನದಿಯಾಗಬೇಕಿತ್ತು ನಾನು, ನಿನ್ನಂತೆ"
ಕಾಡೊರೆಯಿತು ಓಡುತ್ತಿದ್ದ ನದಿಗೆ,
"ನದಿಯಾಗಬೇಕಿತ್ತು ನಾನು, ನಿನ್ನಂತೆ
ಯಾವಾಗಲೂ ಓಡುತ್ತಾ
ನಿತ್ಯ ಹೊಸ ದೃಶ್ಯಗಳ ನೋಡುತ್ತಾ
ಸಾಗರವ ಸೇರುತ್ತಾ
ಇರಬೇಕಿತ್ತು ನಾನೂ, ಉತ್ಸಾಹದಿಂದ ಸಾಗುತ್ತಾ
ನೀರಾದ ಬೆಳಕಂತೆ ಹರಿಯುತ್ತಾ
ನಿರಂತರ ಅಲೆಯುತ್ತಾ..."

"ಆದರೆ ನಾನು!? ಕೇವಲ ಸೆರೆಯಾಳು
ಬಂಧಿಸಲ್ಪಟ್ಟಿದ್ದೇನೆ ಭುವಿಗೆ,
ಬೆಳೆದು ಹಳತಾಗುತ್ತೇನೆ ನಾನು ಮೌನದಲ್ಲಿ;
ಅದರಲ್ಲೇ ನನ್ನ ಜೀವನ,
ನಿಶ್ಶಬ್ದದಲ್ಲೇ ಲೀನವಾಗುತ್ತೇನೆ ನಾನು.
ವರುಷಗಳ ನಂತರ ನನ್ನದೇನೂ ಉಳಿಯುವುದಿಲ್ಲ;
ಇಲ್ಲ! ಉಳಿಯುವುದು ಮುಷ್ಟಿ ತುಂಬ ಬೂದಿ"

"ಕಾಡಾಗಬೇಕಿತ್ತು ನಾನು, ನಿನ್ನಂತೆ"
ಅಲವತ್ತುಗೊಂಡಿತು ನದಿಯು
"ಕಾಡಾಗಬೇಕಿತ್ತು ನಾನು, ನಿನ್ನಂತೆ,
ಇರುತ್ತೀಯ ನೀನು ಅಂತರ್ಮುಖಿಯಂತೆ
ನಿದ್ದೆಯೋ? ಎಚ್ಚರವೋ?
ಸುತ್ತಲಿದೆ ಮಡುಗಟ್ಟಿದ ಮಹನ್ಮೌನ
ಆಹ್ಲಾದವಾಗಿದೆ ಅಗಾಧ ಏಕಾಂತತೆ
ಇದ್ದೀಯ ನೀನು ಹಸಿರು ವಜ್ರದಂತೆ,
ಬೆಳದಿಂಗಳಲ್ಲಿ ಬೆಳಗುತ್ತಾ
ಅರಿವಿಗೆಟುಕದ ರಹಸ್ಯವ ಪಿಸುಗುಡುತ್ತಾ.

ವರ್ಣಮಯ ವಸಂತದ ಮುಕುರ ನೀನು
ಪ್ರತಿಫಲಿಸುತ್ತದರ ಬೆಡಗು-ಅಂದಗಳನ್ನು
ಪ್ರತಿವರುಷವೂ ಹೊಸತನವೆ ನಿನ್ನ ಭವಿತವ್ಯ
ಪ್ರೇಮಿಗಳಿಗೆ ನೀನೊಂದು ನೆರಳಿನಾಶ್ರಯ.
ನನ್ನನ್ನು ನೋಡು! ಯಾವಾಗಲೂ ಓಡುತ್ತಾ
ನನ್ನಿಂದಲೂ ದೂರ, ಬಹಳಷ್ಟು ದೂರ
ಓಟ, ಅಗಾಧ ಓಟ, ದಿಗ್ಭ್ರಮೆಯ ಅಲೆದಾಟ
ಸಿಕ್ಕಿದ್ದು ಏನಿಲ್ಲ ಅರ್ಥವಿಲ್ಲದೀ ಓಟದಿಂದ
ಕನಸಾಯಿತಿನ್ನೆಂದು ಅನಂತ ಶಾಂತಿ
ಛೇ! ಕಾಡಾಗಬೇಕಿತ್ತು ನಾನು ನಿನ್ನಂತೆ"

ತಿಳಿಯಲಾರವು ಇನ್ನೊಬ್ಬರ ಮನದ ಭಾವಗಳು
ಕೇಳುವವರಾರು ಅವನ ಅಸ್ತಿತ್ವ ನಿಜವೇ
ಇಲ್ಲಾ, ಅವನೊಂದು ನೆರಳೇ?
ನಸುಗತ್ತಲಲಿ ಗುರಿಯಿಲ್ಲದೇ
ನಡೆಯುತ್ತದ್ದವನೊಬ್ಬ ತನ್ನನ್ನು
ತಾನೇ ಕೇಳಿಕೊಂಡ- "ನಾನು ಯಾರು?
ನದಿಯೇ? ಕಾಡೇ? ಇಲ್ಲಾ ಇವೆರಡೂ?
ನದಿ ಹಾಗೂ ಕಾಡು?
ನದಿ ಮತ್ತು ಕಾಡು.


                                                                                            ಮೂಲ: ಜಲಾಲುದ್ದೀನ್ ರೂಮಿ
                                                                                            ಅನುವಾದ: ಉಮಾಶಂಕರ್. ಕೆ

ಒಂದಾನೊಂದು ಕಾಲದಲ್ಲಿ...

 

                                                                                                         (ಚಿತ್ರ: ಉಮಾಶಂಕರ್ ಕೆ)

ಒಂದಾನೊಂದು ಕಾಲದಲ್ಲಿ, ಕಂದಾ,
ಜನರು ಹೃದಯಪೂರ್ವಕವಾಗಿ ನಗುತ್ತಿದ್ದರು,
ಅವರ ಕಣ್ಣುಗಳು ಮಿನುಗುತ್ತಿದ್ದವು.
ಆದರೆ ಈಗ? ಅವರೆಲ್ಲಾ ಬರೇ
ಹಲ್ಲುಗಳಿಂದ ನಗುತ್ತಿದ್ದಾರೆ,
ಅವರ ಮಂಜುಗಡ್ಡೆಯಂತಹ ಕಣ್ಣುಗಳು
ನನ್ನ ನೆರಳಿನ ಹಿಂದೆ ಏನನ್ನೋ ಶೋಧಿಸುತ್ತಿರುತ್ತವೆ.

ಅದೊಂದು ಕಾಲವಿತ್ತು, ಕಂದಾ,
ಜನರು ಹಸ್ತಲಾಘವದೊಂದಿಗೆ
ಹೃದಯವನ್ನೂ ಸೇರಿಸುತ್ತಿದ್ದರು.
ಈಗ ಆ ಕಾಲ ಮುಗಿದುಹೋಯಿತು..
ಅವರೆಲ್ಲಾ ಹೃದಯಹೀನವಾಗಿ
ಹಸ್ತಲಾಘವ ಮಾಡುತ್ತಿದ್ದಾರೆ; ಮಾತ್ರವಲ್ಲ,
ಅವರ ಎಡಗೈ ನನ್ನ ಖಾಲಿ ಜೇಬುಗಳನ್ನು ತಡವುತ್ತಿರುತ್ತದೆ.

"ಇದು ನಿಮ್ಮ ಮನೆಯೆಂದೇ ತಿಳಿಯಿರಿ"
"ಇನ್ನೊಮ್ಮೆ ಬರಲೇಬೇಕು"ಎಂದೆಲ್ಲಾ ಹೇಳುತ್ತಾರೆ.
ಹಾಗೆಂದು ನಾನು ಒಂದೆರಡು ಸಲ ಹೋದರೆ
ಮೂರನೇ ಬಾರಿ ಅವರ ಮನೆಬಾಗಿಲು
ನನ್ನ ಪಾಲಿಗೆ ಮುಚ್ಚಿರುತ್ತದೆ..

ಇವರಿಂದೆಲ್ಲಾ ನಾನು ತುಂಬಾ ಕಲಿತೆ ಕಂದಾ..
ಅನೇಕ ಮುಖವಾಡಗಳನ್ನು ತೊಡುವುದನ್ನು ಕಲಿತೆ,
ಅವುಗಳನ್ನು ಬಟ್ಟೆಗಳಂತೆ
ಬದಲಾಯಿಸುವುದನ್ನು ಕಲಿತೆ,
ಮನೆಗೊಂದು ಮುಖವಾಡ,
ಆಫೀಸಿಗೊಂದು ಮುಖವಾಡ,
ದಾರಿಯಲ್ಲೊಂದು, ಅತಿಥಿಯಾಗಿರುವಾಗ ಇನ್ನೊಂದು,
ಪಾರ್ಟಿಗಳಲ್ಲಿ ಮತ್ತೊಂದು.. ಹೀಗೆ..
ಒಂದು ನಿಗದಿತ ನಗುವನ್ನು ಮುಖದಲ್ಲಿ
ಬರಿಸಿಕೊಳ್ಳುವುದನ್ನು ಕಲಿತೆ,
ಅಷ್ಟೇ ಅಲ್ಲ ಮಗೂ.. ಬರೇ ಹಲ್ಲುಗಳಿಂದ
ನಗುವುದನ್ನು ಕಲಿತೆ,
ಹೃದಯರಹಿತವಾಗಿ ಷೇಕ್ ಹ್ಯಾಂಡ್
ಮಾಡುವುದನ್ನು ಕಲಿತೆ,
ಮಾತ್ರವಲ್ಲ, 'ಅಬ್ಬಾ! ಪಾರಾದೆ' ಎಂದುಕೊಳ್ಳುತ್ತಾ
'ಶುಭವಿದಾಯ'.ಹೇಳುವುದನ್ನೂ ಕಲಿತೆ.
ಸಂತಸವಾಗದಿದ್ದರೂ "ನಿಮ್ಮನ್ನು
ಭೇಟಿಯಾದದ್ದು ತುಂಬಾ ಸಂತೋಷ" ಎನ್ನಲು ಕಲಿತೆ,
ಮಾತೆಲ್ಲಾ ಕೇಳಿ ಸಾಕಾದಮೇಲೂ
"ನಿಮ್ಮಲ್ಲಿ ಮಾತಾಡುವುದೆಂದರೆ ಖುಷಿಯ ವಿಚಾರ"
ಎನ್ನಲು ಕಲಿ
ತೆ.


ಆದರೆ ದಯವಿಟ್ಟು ನನ್ನನ್ನು ನಂಬು ಕಂದಾ..
ನಿನ್ನಂತಿರುವಾಗ ನಾನು ಹೇಗಿದ್ದೆನೋ ಮತ್ತೆ
ಹಾಗಾಗಬೇಕೆಂದುಕೊಂಡಿದ್ದೇನೆ.
ಈ ಭಾವನಾರಹಿತ ವಿಷಯಗಳನ್ನೆಲ್ಲಾ
ಮರೆಯಬೇಕೆಂದಿದೆ.
ನಗುವುದನ್ನು ಮತ್ತೆ
ಹೊಸದಾಗಿ ಕಲಿಯಬೇಕೆಂದಿದೆ ಕಂದಾ..
ಯಾಕೆ ಗೊತ್ತಾ..?
ನಾನು ಕನ್ನಡಿಯೆದುರು ನಿಂತು ನಕ್ಕರೆ ನನ್ನ
ಹಲ್ಲುಗಳೆಲ್ಲಾ ಹಾವಿನ ದಂತಗಳಂತೆ ಕಾಣುತ್ತವೆ ಮಗೂ..

ಆದ್ದರಿಂದ ಹೇಗೆ ನಗುವುದೆಂದು ನನಗೆ
ಕಲಿಸುತ್ತೀಯಾ...?
ನಾನು ನಿನ್ನಂತಿರುವಾಗ ಹೇಗೆ ನಗುತ್ತಿದ್ದೆನೆಂಬುದನ್ನು
ಹೇಳಿಕೊಡುತ್ತೀಯಾ..? ■

ಗೇಬ್ರಿಯೆಲ್ ಓಕಾರಾ ಬರೆದ ಸುಪ್ರಸಿದ್ಧ ಕವನ 'Once upon a time' ನ ಭಾವಾನುವಾದ.
                                                                                     
                                                                                                        ಮೂಲ: ಗೇಬ್ರಿಯೆಲ್ ಒಕಾರಾ
                                                                                                        ಅನುವಾದ: ಉಮಾಶಂಕರ್ ಕೆ

Thursday, November 10, 2022

ಕುಲನಾಮದ ಕಥೆ

 "ಕೇಳತ್ತಾಯರೇ... ನಮಸ್ಕಾರ!"- ಇದು ನಮ್ಮಪ್ಪನನ್ನು ಕಂಡಾಗ ಪರಿಚಯಸ್ಥರು ಮಾತಿಗಾರಂಭಿಸುವ ರೀತಿ.

ಮಧ್ಯಾಹ್ನದೂಟಕ್ಕೆ ನಮ್ಮಲ್ಲಿಗೆ ಬರುವವರೊಬ್ಬರು "ಕೇಳತ್ತಾಯರೇ..‌. ಏನು ಮಾಡ್ತಾಯಿದ್ದೀರಿ?" ಎಂದು ಕೇಳುತ್ತಲೇ ಮನೆಯೊಳಗೆ ಬರುವುದು.

ನಮ್ಮ ಸಂಗೀತಗುರುಗಳಾಗಲೀ, ಅವರ ವಿದ್ವತ್ ಶಿಷ್ಯವರ್ಗವಾಗಲೀ ಎಲ್ಲರೂ ನಮ್ಮಪ್ಪನನ್ನು ಸಂಬೋಧಿಸುವುದು "ಕೇಳತ್ತಾಯರೇ" ಎಂದು. ನಾನು ಅವರಿಗೆಲ್ಲಾ 'ಕೇಳತ್ತಾಯರ ಮಗ'!.

ಅಪ್ಪ, ನಿವೃತ್ತರಾಗುವುದಕ್ಕಿಂತ ಮುಂಚೆ ಅವರು ಕೆಲಸ ಮಾಡುತ್ತಿದ್ದ ಕಛೇರಿಯಲ್ಲಿ 'ಕೇಳತ್ತಾಯರು' ಎಂದೇ ಪ್ರಸಿದ್ಧ. ಅವರ ನಿಜನಾಮಧೇಯವನ್ನು ಮರೆತವರೂ 'ಕೇಳತ್ತಾಯರು' ಎಂಬುದನ್ನು ನೆನಪಿನಲ್ಲಿರಿಸಿಕೊಂಡಿರುತ್ತಾರೆ.

ಹಾಗಿದ್ದರೆ ಈ "ಕೇಳತ್ತಾಯ" ಅಂದರೇನು? ಎಂದು ನಿಮಗೆಲ್ಲಾ ಪ್ರಶ್ನೆ ಹುಟ್ಟಬಹುದು.

ಉತ್ತರ ಹೇಳಿಯೇಬಿಡುತ್ತೇನೆ ಕೇಳಿ.

ಶಿವಳ್ಳಿ ಬ್ರಾಹ್ಮಣರ ಸುಮಾರು ೧೨೦ ಕುಲನಾಮಗಳಲ್ಲಿ ಈ 'ಕೇಳತ್ತಾಯ'ವೂ ಒಂದು. ಶಿವಳ್ಳಿ ತುಳುವಿನಲ್ಲಿ 'ಕೇಳತ್ತಾಯ' ಎಂದರೆ 'ಕೇಳ ಎಂಬ ಊರಿನವನು' ಎಂದರ್ಥ. ಮೂಡುಬಿದರೆಯ ವೇಣೂರಿನ ಸಮೀಪ ಕೇಳದ ಪೇಟೆ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿ ನಮ್ಮ ಪೂರ್ವಜರು ನೆಲೆಸಿದ್ದರಂತೆ. ಅಲ್ಲಿ ಈಗೊಂದು ಚೊಕ್ಕವಾದ ಪಂಚಲಿಂಗೇಶ್ವರನ ಗುಡಿಯಿದೆ. ಈ ಕೇಳ ಗ್ರಾಮದಲ್ಲಿ ನಮ್ಮ ಹಿಂದಿನವರು ತಳವೂರಿದ್ದುದರಿಂದಲೇ ನಮ್ಮ ವಂಶಕ್ಕೆ ಕೇಳತ್ತಾಯ ಎಂಬ ಹೆಸರು ಬಂದುದು. ಇದನ್ನೇ ಹಿಡಿದುಕೊಂಡು ನಮ್ಮನ್ನು ಹಾಸ್ಯ ಮಾಡಿದವರೂ ಇದ್ದಾರೆ: "ನಿಮ್ಮೊಂದಿಗೆ ಏನನ್ನು ಮಾತನಾಡುವುದಯ್ಯಾ! ಎಷ್ಟಾದರೂ ನೀವು ಕೇಳದವರಲ್ಲವೇ?" ಅಂತ. ಹಾಗಾಗಿ ಕೇಳ ಎಂಬ ಊರಿನವರಾದ ನಾವು ಯಾರ ಮಾತನ್ನೂ ಕೇಳದವರು ಎಂಬ ಪಟ್ಟವನ್ನೂ ಗಳಿಸಿಕೊಂಡಿದ್ದೇವೆ!!. ಅದಿರಲಿ. ಕೇಳದ ಗ್ರಾಮದಲ್ಲಿದ್ದ ನಮ್ಮ ವಂಶಸ್ಥರು ಕಾರಣಾಂತರಗಳಿಂದ ಬೇರೆ ಕಡೆ ಗುಳೆ ಹೋದರಂತೆ. ಅಂತೂ ಸದ್ಯಕ್ಕೆ ನಮಗೆ ಗೊತ್ತಿರುವಂತೆ ಕೇಳತ್ತಾಯ ಕುಟುಂಬದ ಗಂಡಸರು ನಾನು,ನನ್ನಪ್ಪ ಬಿಟ್ಟರೆ ಬೇರಾರೂ ಇಡೀ ಭೂಮಂಡಲದಲ್ಲೆಲ್ಲೂ ಇಲ್ಲ. ಅಂದ ಹಾಗೆ ಇದೆಲ್ಲಾ ಏಕೆ ನೆನಪಾಯಿತೆಂದರೆ ನಾನು ಇತ್ತೀಚೆಗೆ, ಅಂದರೆ ಎರಡು-ಮೂರು ವಾರಗಳ ಹಿಂದೆ ಮೊತ್ತಮೊದಲಬಾರಿ ಕೇಳ ಗ್ರಾಮಕ್ಕೆ ಹೋಗಿದ್ದೆ. ಕ್ಯಾಮೆರಾ ತೆಗೆದುಕೊಂಡಿದ್ದೆನೆಂದು ಬೇರೆ ಹೇಳಬೇಕಾಗಿಲ್ಲ ತಾನೇ! ಹಾಗೇ ದೇವಾಲಯದೆದುರಿನ ಹೂದೋಟದಲ್ಲಿ ತಿರುಗುತ್ತಿರಬೇಕಾದರೆ ಸಿಕ್ಕಿದ ನೇರಳೆ ಸೂರಕ್ಕಿ ಇಲ್ಲಿದೆ ವೀಕ್ಷಿಸಿ.. 


ಈ ಫೊಟೋ ತೋರಿಸುವುದಕ್ಕಾಗಿ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯಿತು ನೋಡಿ!.


                                                                                                    (ಚಿತ್ರ: ಉಮಾಶಂಕರ ಕೇಳತ್ತಾಯ)

Monday, November 7, 2022

ಅಂತರ

 

                                                                                                                 (ಚಿತ್ರಕೃಪೆ: ಅಂತರ್ಜಾಲ)

ಅಮರುಕ ಕವಿಯ ಅಮರುಶತಕದ ಪದ್ಯವೊಂದರ ಭಾವಾನುವಾದ, ಮಲ್ಲಿಕಾಮಾಲೆಯಲ್ಲಿ:

ಅಂದು ದೇಹಗಳೊಂದೆಯೆನ್ನುವಭಿನ್ನಭಾವವದೀರ್ವರೊಳ್|
ಕುಂದಲಾಶೆಗಳೆನ್ನೊಳಾಗಲೆ ನೀನು ನಲ್ಲನು ನಾಂ ಪ್ರಿಯೇ||
ಇಂದು ನಾವ್ಗಳು ಗಂಡಹೆಂಡಿರು ಬೇರೆಯೇನನು ಪೇಳ್ವೆನೋ|
ಕಂದಿದೆನ್ನಯ ಪ್ರಾಣದೋಳಿಯ ವಜ್ರಗಾಢತೆಯೀ ಫಲಂ||

[ಮೊದಲು ನಾವಿಬ್ಬರೂ ಒಂದೇ ದೇಹವೇನೋ ಎಂಬಷ್ಟು ಆತ್ಮೀಯರಾಗಿದ್ದೆವು. ಅನಂತರ ನೀನು ಪ್ರಿಯತಮ, ನಾನು ಹತಾಶಳಾದ ಪ್ರಣಯಿನಿಯಾದೆ. ಈಗ ನೀನು ಪತಿ, ನಾನು ಪತ್ನಿ ಎಂಬುದಷ್ಟೇ ಉಳಿದಿದೆ. ನಾನು ವಜ್ರದಂತೆ ಕಠಿಣವಾದುದರಿಂದ ಇದನ್ನು ಇನ್ನೂ ಅನುಭವಿಸುತ್ತಿದ್ದೇನೆ. (ಸಂಬಂಧದಿಂದ ಹತ್ತಿರವಾಗುತ್ತಾ ಬಂದರೂ ಮಾನಸಿಕವಾಗಿ ಅಂತರ ಹೆಚ್ಚುತ್ತಿದೆ.)]

ಮೂಲ (ಶಿಖರಿಣೀ): ತಥಾಭೂದಸ್ಮಾಕಂ ಪ್ರಥಮಮವಿಭಿನ್ನಾ ತನುರಿಯಂ
ತತೋ ನು ತ್ವಂ ಪ್ರೇಯಾಮಹಮಪಿ ಹತಾಶಾ ಪ್ರಿಯತಮಾ|
ಇದಾನೀಂ ನಾಥಸ್ತ್ವಂ ವಯಮಪಿ ಕಲತ್ರಂ ಕಿಮಪರಂ
ಮಯಾಪ್ತಂ ಪ್ರಾಣಾನಾಂ ಕುಲಿಶಕಠಿನಾನಾಂ ಫಲಮಿದಂ||

                                                                                                                            -ಉಮಾಶಂಕರ್ ಕೆ

Tuesday, October 25, 2022

ತಿಗಣೆಗಳ ಕಾಟ

ಸಂಸ್ಕೃತ ಶ್ಲೋಕವೊಂದನ್ನಾಧರಿಸಿ ಬರೆದ ಪದ್ಯ, ಸಾಂಗತ್ಯದಲ್ಲಿ:

ನಿದ್ರಿsಪಳ್ ಲಕ್ಷ್ಮಿsಯುs ಕಂಜsದೊಳ್ ಹರನೋ ಹಿs-
ಮಾದ್ರಿsಯೊಳ್ ಹರಿಯುs ಪಾಲ್ಗಡಲೊಳ್|
ನಿದ್ರಿsಪರ್ ದೇವರ್ಕsಳಾದsರೇಂ ತಿಗಣೆsಯುs-
ಪದ್ರsವs ಸಹಿಪsರೇನಕಟಾ!||

(ಲಕ್ಷ್ಮಿಯು ಕಮಲದಲ್ಲೂ, ಶಿವನು ಹಿಮಾಲಯದಲ್ಲೂ ಮತ್ತು ವಿಷ್ಣುವು ಹಾಲಿನ ಸಮುದ್ರದಲ್ಲೂ ನಿದ್ರಿಸುತ್ತಾರೆ. ಇವರೆಲ್ಲಾ ದೇವರಾದರೇನಂತೆ? ತಿಗಣೆಗಳ ಕಾಟವನ್ನು ಸಹಿಸಬಲ್ಲರೇ?)

(ಮೂಲ: ಕಮಲೇ ಕಮಲಾ ಶೇತೇ ಹರ: ಶೇತೇ ಹಿಮಾಲಯೇ|
ಕ್ಷೀರಾಬ್ಧೌ ಚ ಹರಿ: ಶೇತೇ ಮನ್ಯೇ ಮತ್ಕುಣ ಶಂಕಯಾ||

ಲಕ್ಷ್ಮಿಯು ಕಮಲದಲ್ಲೂ, ಶಿವನು ಹಿಮಾಲಯದಲ್ಲೂ ಮತ್ತು ವಿಷ್ಣುವು ಹಾಲಿನ ಸಮುದ್ರದಲ್ಲೂ ನಿದ್ರಿಸುತ್ತಾರೆ. ತಿಗಣೆಗಳ ಭಯವೇ ಇದಕ್ಕೆ ಕಾರಣವಿರಬೇಕು.)

- ಉಮಾಶಂಕರ್ ಕೆ

ದೀಪಾವಳಿ

 

                                                                                                                      (ಚಿತ್ರಕೃಪೆ: ಅಂತರ್ಜಾಲ)

ಸುತ್ತಲೂ ಬೆಳದಿಂಗಳು ಸುರಿಯುತ್ತಿರುವಾಗ, ರಾತ್ರಿಯ ಹಿಮದ ಮೈಯನ್ನು ಮೃದುವಾಗಿ ಸವರಿಕೊಂಡು ತೂರಿ ಬಂದ ತಂಗಾಳಿ ತೆಂಗಿನ ಗರಿಗಳನ್ನು ಪಟಪಟನೆ ಪ್ರಕಂಪಿಸುವಂತೆ ಮಾಡಿದಾಗ ಎಂದಾದರೂ ಹುಸೇನಿ ರಾಗವನ್ನು ಕೇಳಿದ್ದೀಯಾ? ಸ್ವಾತಿ ತಿರುನಾಳರ 'ಕನಕಮಯಮಾಯಿಡುಂ' ರಚನೆಗೆ ಗಾಳಿಯೂ ತನ್ನ ಬಿಸಿಯನ್ನು ಕಳೆದುಕೊಂಡು ತಂಪಾಗಿ ಮೈತೀಡುತ್ತದೆ. ಬೆಳದಿಂಗಳ ಕನಕಾಭಿಷೇಕದಲ್ಲಿ ಮಿಂದು ಹೊಳೆಯುತ್ತಿರುವ ತೆಂಗಿನ ಹೆಡಲುಗಳು ರಾತ್ರಿಯ ಆ ಸ್ತಬ್ಧತೆಯಲ್ಲಿ ನಿಧಾನವಾಗಿ ತಲೆದೂಗಲಾರಂಭಿಸುತ್ತವೆ. ‘ಕುಳಿರ್ ಮತಿ’ಯು ನಿಜವಾಗಿಯೂ ಕಲಭಗತಿಯಲ್ಲಿ ಸಂಚರಿಸತೊಡಗುತ್ತಾನೆ. ಅಷ್ಟು ಹೊತ್ತಿಗೆ ಅಲ್ಲೆಲ್ಲೋ ಎಲೆಮರೆಯಲ್ಲಿ ಮುಖಮರೆಸಿಕೊಂಡಿದ್ದ ಕಾಡುಮಲ್ಲಿಗೆಯ ಮೊಗ್ಗೊಂದು ಮೌನವಾಗಿ ವಿಕಸಿತಗೊಂಡು ತನ್ನ ಪರಿಮಳದಿಂದಲೇ ನನ್ನನ್ನು ಸುತ್ತುವರೆದು ಬಿಡುತ್ತದೆ. ಇಂತಹ ಮತ್ತೇರಿಸುವ ನಿಶಾಕಾಲದಲ್ಲಿ ಕೆಲವೊಮ್ಮೆ ಗಂಟೆಗಟ್ಟಲೆ ನೀರವವಾಗಿ ಕುಳಿತು ಆಲೋಚಿಸುತ್ತಿದ್ದುದುಂಟು. ಆಗೆಲ್ಲಾ ನೀನು ನೆನಪಿಗೆ ಬರುತ್ತಿದ್ದೆ. ಹುಸೇನಿ ರಾಗದ ಮೋಹಕಗಂಭೀರ ಏರಿಳಿತಗಳು, ಪಲುಕುಗಳು ನಿನ್ನ ನೆನಪಿನ ತಂತಿಗಳನ್ನು ಮೀಟಿ ರಾಗತರಂಗಗಳನ್ನೆಬ್ಬಿಸುವಷ್ಟು ಶಕ್ತವಾಗಿದ್ದವು; ಆಗ ನಾನು ನಿನಗೆ, ನೀನು ನನಗೆ ಪರಿಚಯವಿಲ್ಲದಿದ್ದರೂ ಸಹ.

ನಾಳೆ ದೀಪಾವಳಿ ಹಬ್ಬವಂತೆ.

ಮೌನವಾಗಿ ಅದೇತರಲ್ಲೊ ಮಗ್ನನಾಗಿದ್ದಾಗ, ಪುಟ್ಟ ಮಗುವಿನಂತೆ ಓಡಿಬಂದು ಕಣ್ಣುಗಳಲ್ಲಿ ಸಡಗರವನ್ನುಕ್ಕಿಸುತ್ತಾ ಕೈಯಾಡಿಸಿ ಮಾತನಾಡಿಸುತ್ತಿದ್ದೆ. ಯಾವುದೋ ಬೇಸರದಲ್ಲಿ ಮ್ಲಾನನಾಗಿದ್ದಾಗ ‘ಇವಳು ಇಷ್ಟೊಂದು ಬೆಳೆದದ್ದು ಯಾವಾಗ?’ ಎಂದು ಅಚ್ಚರಿ ಪಡುವಂತೆ ಸಮಾಧಾನ ಹೇಳುತ್ತಿದ್ದೆ. ಅದೇನೋ ತುಂಟತನದ ಹಾಸ್ಯಚಟಾಕಿ ಹಾರಿಸಿದ್ದಕ್ಕೆ ಅಂದೊಮ್ಮೆ ನಗುನಗುತ್ತಲೇ ಸಿಹಿಯಾಗಿ ತರಾಟೆಗೆ ತೆಗೆದುಕೊಂಡಿದ್ದೆಯಲ್ಲಾ.. ಅದನ್ನು ಮತ್ತೆ ಮತ್ತೆ ನೆನೆದು ಅದೆಷ್ಟು ಸವಿದಿದ್ದೇನೆ ಗೊತ್ತಾ? ಬೈಗುಳವೂ ಅಷ್ಟೊಂದು ಆಹ್ಲಾದಕರವಾಗಿರಬಹುದೆಂದು ನಾನು ತಿಳಿದದ್ದು ಅಂದೇ. ನಿನ್ನ ಗೆಜ್ಜೆಗಳ ಝಲ್ ಝಲ್ ಧ್ವನಿಯನ್ನು ಮನಸ್ಸು ಹಿಂಬಾಲಿಸುತ್ತಿದ್ದರೂ ಕೆಲಸದಲ್ಲಿ ಮಗ್ನನಾಗಿರುವಂತೆ ನಟಿಸುತ್ತಿದ್ದೆ. ನೀನೆಂದರೆ ಅದೇನೋ ಸಡಗರ..

ನಿನ್ನ ಕಣ್ಣುಗಳೇ ಅದೆಷ್ಟೋ ಸಲ ದೀಪವಾಗಿ ಆರತಿ ಬೆಳಗುತ್ತಿರುವುದನ್ನು ಕಂಡಿದ್ದೇನೆ.. ನಗರದ ಬಣ್ಣಬಣ್ಣದ ಪ್ರಖರ ದೀಪಗಳ ನಡುವೆ ಅವೆಲ್ಲಕ್ಕಿಂತಲೂ ಪ್ರೋಜ್ವಲವಾಗಿ ಮಿನುಗುವ ನಿನ್ನ ಕಣ್ಣುಗಳು ನನ್ನತ್ತ ನೋಡುತ್ತಿರುವುದನ್ನು ಗಮನಿಸಿದ್ದೇನೆ.. ಇದೋ ಮತ್ತೆ ಹೇಳುತ್ತಿದ್ದೇನೆ: ನಿನ್ನ ಕಣ್ಣುಗಳಲ್ಲಿರುವ ದೀಪಗಳ ಹಾವಳಿಯನ್ನು ಅನುಭವಿಸಲು ಮನಸ್ಸು ಮತ್ತೆ ಮತ್ತೆ ಬಯಸುತ್ತಿದೆ. ಅದರಿಂದ ತಪ್ಪಿಸಿಕೊಳ್ಳಲು ಅದೇಕೋ ಮನಸ್ಸೇ ಬರುತ್ತಿಲ್ಲ. ದೀಪಾವಳಿ ಎಂದರೆ ದೀಪಗಳ ಸಮೂಹ ಎಂದು ಅರ್ಥವಂತೆ. ದೀಪಾವಳಿ ಹಬ್ಬವೆಂದರೆ ಬೆಳಕಿನ ಹಬ್ಬ.

ನಿನ್ನ ಜೊತೆಯಲ್ಲಿರುವವರೆಗೂ ನನಗೆ ಶಾಶ್ವತವಾಗಿ ದೀಪಾವಳಿಯೇ ತಾನೇ..!

ಹಬ್ಬದ ಶುಭಾಶಯಗಳು.

- ಉಮಾಶಂಕರ್ ಕೆ 

Tuesday, October 4, 2022

ಸ್ವರ್ಣಪಥ

                                                                                            (ಚಿತ್ರ: ಉಮಾಶಂಕರ ಕೇಳತ್ತಾಯ)
 

ಅಲ್ಲಿ ಹೊನ್ನಿನ ಬಟ್ಟೆಯೊಳ್ಮನವಾಡಲಾಟಿಪುದೇತಕೋ
ಅಲ್ಲಿ ಬೆಂಕಿಯುಗುಳ್ವ ಸೂರ್ಯನ ಮುಟ್ಟಲೇತಕೆ ಪಾರ್ವುದೋ|
ಕಲ್ಲಿನಂತೆಯೆ ಶಾಂತಿಯಿಂ ಕರಮೊಪ್ಪದೇತಕೆ ಪಾಳ್ಮನಂ
ಬಲ್ಲೆಯೇಂ ತವಶೌರ್ಯ ಕೇಳ್ವುದು ಬಲ್ಲ ಬುದ್ಧಿಯ ಸಖ್ಯಮಂ|| 
                                                
                                               (ಮಲ್ಲಿಕಾಮಾಲಾವೃತ್ತ) 
                                         - ಉಮಾಶಂಕರ ಕೇಳತ್ತಾಯ

ಆ ಬಂಗಾರದ ಬಣ್ಣದ ಹಾದಿಯಲ್ಲಿ ಮನಸ್ಸೇಕೆ ಆಡಲು ಬಯಸುತ್ತಿದೆಯೋ!
ಆ ಬೆಂಕಿಯ ಉಂಡೆಯಾಗಿರುವ ಸೂರ್ಯನನ್ನುಮುಟ್ಟಲು ಮನಸ್ಸೇಕೆ ಹಾರುತ್ತಿದೆಯೋ!
ಈ ಹಾಳು ಮನಸ್ಸೇಕೆ ಕಲ್ಲಿನಂತೆ ಮೌನವಾಗಿ ಶಾಂತಿಯಿಂದ ಕುಳಿತುಕೊಳ್ಳುವುದಿಲ್ಲ?
ಮನಸ್ಸೇ.. ನಿನ್ನ ಶೌರ್ಯವು ವಿವೇಕದ ಜತೆಯನ್ನು ಕೇಳುತ್ತದೆ.

        

Thursday, September 15, 2022

ಮನೆ

 

                                                                                                           (ಚಿತ್ರಕೃಪೆ: ಅಂತರ್ಜಾಲ)

ಮನೆಯೊಂದು ಇರಬೇಕು
ಕೊಂಬೆಗಳ ಮರೆಯಲ್ಲಿ
ಹೊನ್ನಕ್ಕಿ ಬಚ್ಚಿಟ್ಟ ಗೂಡಿನಂತೆ|

ಜಗದೆಲ್ಲ ಗದ್ದಲವ-
ನೊಳಗಿನಿತು ಬಿಡದಂತೆ
ಇರಬೇಕು ಕಾನನದ ಸುತ್ತುಕೋಟೆ|

ಬೆಳಗಿನೆಳೆ ಬಿಸಿಲಿನಲಿ
ಪಿಕಳಾರ ಕುಟುರಗಳು
ಕುವರವ್ಯಾಸನ ಪದಕೆ ಶೃತಿಗೈಯಬೇಕು|

ಮಧ್ಯಾಹ್ನಕಾಲದಲಿ
ಚಿಗುರ ತಂಬುಳಿಯೂಟ
ಸವಿದು ತಂಪಿನ ನೆಲಕೆ ಒರಗಬೇಕು|

ಮುಸ್ಸಂಜೆ ಕವಿದಾಗ
ಗಂಭೀರ ಮೌನದಲಿ
ಮನವು ಶಾಂತಿಯ ಕಣಿವೆಗಿಳಿಯಬೇಕು|

ನಿಶೆಯಲೊಳಕೋಣೆಯಾ
ಬಿಸುಪಿನಲಿ ನಿದ್ರಿಸಿರೆ
ನಿನ್ನೆ ನಾಳೆಗಳನ್ನು ಮರೆಯಬೇಕು|

- ಉಮಾಶಂಕರ್ ಕೆ

ಭಯ

 

                                                                                            (ಚಿತ್ರಕೃಪೆ: ಅಂತರ್ಜಾಲ)

ಖಲೀಲ್ ಗಿಬ್ರಾನ್ ಬರೆದನೆಂದು ಹೇಳಲಾದ ಆಂಗ್ಲ ಪದ್ಯವೊಂದರ ಭಾವಾನುವಾದ, ಭೋಗಷಟ್ಪದಿಯಲ್ಲಿ:

ನದಿಯು ಹರಿದು ಬರುತ ತಿರುವ-
ಲಿದಿರು ಕಂಡ ಶರಧಿಯನ್ನು
ಮೊದಲಬಾರಿ ಕಾಣೆ ಭಯದೊಳದುರಿಬಿಡುವಳು|
ಮುದದಿ ಬಳುಕಿಯಿಳಿದ ಶಿಖರ-
ವದರ ತಳದಿ ಫಣಿಯ ತೆರದಿ
ಮದದೊಳುಕ್ಕಿ ಹರಿದ ಪಥವ ತಿರುಗಿ ನೋಳ್ಪಳು||

ಇದಿರು ಮೈಯ ಹರಡಿ ನಿಂತ
ಮದಿಸಿದಲೆಗಳಂಚ ಸೆರಗು
ಹೊದೆದ ಕಡಲ ಪೊಗುವುದೆಂದರಂತ್ಯವಲ್ಲವೇ?|
ಬದಲುಹಾದಿಯಿಲ್ಲವಾಯ್ತು
ಪದವ ಹಿಂದಕಿಡಲಸಾಧ್ಯ-
ವದನು ಜಗದೊಳೆಸಗಲಾರು ಶಕ್ತರಿರ್ಪರು?||

ಹೊಳೆಯು ಕಡಲ ಹೊಗಲೆಬೇಕು
ಅಲೆಗಳೊಡನೆ ಸೇರಬೇಕು
ಇಳೆಯ ನಿಯಮವಿದುವೆ ನೋಡ ಭಯವ ಗೆಲ್ಲಲು|
ಹೊಳೆಗೆ ಕಡಲ ಸೇರ್ಕೆಯದರ
ವಿಲಯವಲ್ಲ ಬದಲು ತಾನೆ
ಜಲಧಿಯಾಗಿ ಮಾರ್ಪುಗೊಳ್ವ ಶುಭದ ಗಳಿಗೆಯು||

                              

                            - ಮೂಲ: ಖಲೀಲ್ ಗಿಬ್ರಾನ್
                                            ಭಾವಾನುವಾದ - ಉಮಾಶಂಕರ್ ಕೆ.